ರೈತ, ಯೋಧ ಹಾಗೂ ಪೌರಕಾರ್ಮಿಕರು ನಮ್ಮ ದೇಶದ ಆಸ್ತಿ: ಮೇಯರ್ ಸುನೀತಾ ಅಣ್ಣಪ್ಪ

ಶಿವಮೊಗ್ಗ: ರೈತ, ಯೋಧ ಮತ್ತು ಪೌರಕಾರ್ಮಿಕ ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಸಂರಕ್ಷಿಸಿ ಬೆಳೆಸುವ ಹೊಣೆ ನಮ್ಮೆಲ್ಲರದಾಗಿದ್ದು, ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ತಿಳಿಸಿದರು. 

ಮಹಾನಗರಪಾಲಿಕೆ ವತಿಯಿಂದ ನಗರದ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ-೨೦೨೧ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.      ಪೌರಕಾರ್ಮಿಕರ ಸೇವೆ ನಮ್ಮೆಲ್ಲರಿಗೂ ಅತ್ಯಗತ್ಯವಾಗಿದ್ದು, ಇವರ ಅಭ್ಯುದಯಕ್ಕಾಗಿ ನಾವೂ ಕೂಡ ಶ್ರಮಿಸಬೇಕು. ಸರ್ಕಾರ ಪೌರಕಾರ್ಮಿಕರು ಗೌರವಯುತವಾಗಿ ಬದುಕಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ನೀಡಲಾಗುತ್ತಿದ್ದ ಗೌರವಧನವನ್ನು ೩,೫೦೦ರಿಂದ ೭೦೦೦ ರೂಪಾಯಿಗೆ ಏರಿಸಲಾಗಿದೆ. ಇದಕ್ಕೆ ಸರ್ಕಾರ ಹಾಗೂ ಪೌರಕಾರ್ಮಿಕರಿಗೆ ಅಭಿನಂದಿಸುತ್ತೇನೆ. 

ತಾಳಿ ಭಾಗ್ಯ ಯೋಜನೆಯಡಿ ನೀಡುವ ೫೦,೦೦೦ ರೂಪಾಯಿ, ಸಂಕಷ್ಟದಲ್ಲಿರುವ ಪೌರಕಾರ್ಮಿಕರ ಕುಟುಂಬದವರ ಮದುವೆಗೆ ಪಾಲಿಕೆಯ ಒಂದು ಉಡುಗೊರೆಯಾಗಿದೆ. ಹಾಗೆಯೇ ಕಾರ್ಮಿಕರ ಸಮಾರಂಭಗಳಿಗೆAದೇ ಪ್ರತ್ಯೇಕ ಭವನ ಬೇಕೆಂದು ೪ ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನದ ಕಾರ್ಯ ಪ್ರಗತಿಯಲ್ಲಿದೆ. ಹಾಗೂ ಕಾರ್ಮಿಕರ ಆರೋಗ್ಯ ಅತಿ ಮುಖ್ಯವಾಗಿದ್ದು, ನಿಯಮಿತವಾಗಿ ಆರೋಗ್ಯ ಪರೀಕ್ಷೆ ಶಿಬಿರಗಳನ್ನು ಮಾಡಲಾಗುತ್ತಿದೆ. ಬರುವ ಅಕ್ಟೋಬರ್ ೧೦ರೊಳಗೆ ಎಲ್ಲ ಪೌರಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ನಡೆಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಪೌರಕಾರ್ಮಿಕರು ನಮ್ಮೆಲ್ಲರ ಆರೋಗ್ಯ ರಕ್ಷಕರು. ಗಾಂಧೀಜಿಯವರು ಇವರಿಗೆ ನಿಜವಾದ ದೇವರು, ಹರಿಜನ ಎಂದಿದ್ದಾರೆ. ಇಂತಹ ಪೌರಕಾರ್ಮಿಕರು ಗೌರವಯುತವಾಗಿ ಬದುಕಲು ಪಕ್ಷಭೇದ ಮರೆತು ಎಲ್ಲ ಸರ್ಕಾರಗಳು ಉತ್ತಮ ಸೌಲಭ್ಯಗಳನ್ನು ನೀಡುತ್ತಾ ಬಂದಿವೆ. ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ೨೦೧೦ನೇ ಸಾಲಿನಿಂದ ಪೌರಕಾರ್ಮಿಕರ ದಿನಾಚರಣೆ ಆರಂಭಿಸಿದ್ದು, ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದರು. 

ಬಿದ್ದವರನ್ನು ಮೇಲೆತ್ತುವ ಸಂಸ್ಕೃತಿ ನಮ್ಮದಾಗಿದ್ದು, ಸೈನಿಕರಂತೆ ತಮ್ಮ ಪ್ರಾಣದ ಹಂಗನ್ನು ತೊರೆದು ನೈರ್ಮಲ್ಯ ಕಾರ್ಯದಲ್ಲಿ ತೊಡಗಿರುವವರ ಇವರನ್ನು ಯಾರೂ ಎಂದಿಗೂ ಕೈಬಿಡುವುದಿಲ್ಲ. ಪೌರಕಾರ್ಮಿಕರ ಸಮಸ್ಯೆಗಳು, ಬೇಡಿಕೆಗಳನ್ನು ಪರಿಶೀಲಿಸಿ ಅವುಗಳನ್ನು ಈಡೇರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. 

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಮಾತನಾಡಿ, ಸ್ವಚ್ಛತೆಗಾಗಿ ನಿತ್ಯ ಶ್ರಮಿಸುವ ಪೌರಕಾರ್ಮಿಕರಿಗೆ ಇದು ಸಂಭ್ರಮಾಚರಣೆಯ ದಿನವಾಗಿದ್ದು, ಕಾರ್ಮಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಮಾಡಿಕೊಡಲು ಆಡಳಿತ ಹಾಗೂ ವಿರೋಧ ಪಕ್ಷದವರೆಲ್ಲ ಶ್ರಮಿಸುವುದಾಗಿ ತಿಳಿಸಿದರು.

ಪಾಲಿಕೆ ಸದಸ್ಯ ಜ್ಞಾನೇಶ್ ಮಾತನಾಡಿ, ವೈದ್ಯೋ ನಾರಾಯಣ ಹರಿ ಎನ್ನುವಂತೆ ಪೌರಕಾರ್ಮಿಕರೂ ಹರಿಗೆ ಸಮವಾಗಿದ್ದಾರೆ ಎಂದು ಪೌರಕಾರ್ಮಿಕರ ಶ್ರಮವನ್ನು ಶ್ಲಾಘಿಸಿದರು. ಪಾಲಿಕೆಯ ಮತ್ತೊಬ್ಬ ಸದಸ್ಯರಾದ ಹೆಚ್.ಸಿ.ಯೋಗೇಶ್ ಮಾತನಾಡಿ, ಕೋವಿಡ್‌ನಂತಹ ಸಂಕಷ್ಟದಲ್ಲಿ ಎಲ್ಲರಿಗಿಂತ ಮುಂದೆ ಬಂದು ಹೋರಾಡಿದ ಇವರಿಗೆ ಅನಂತ ಕೃತಜ್ಞತೆಗಳು. ಸಾರ್ವಜನಿಕರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿಮ್ಮದಿದೆ ಎಂದ ಅವರು, ಈ ದಿನಾಚರಣೆ ಹಿಂದೆ ಒಂದು ದಿನ ಇದೆ. ಈಗ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಚಟುವಟಿಕೆಗಳಿಂದ ಕೂಡಿ ಏಳು ದಿನಗಳವರೆಗೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.

ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೆಚ್. ಮಾತನಾಡಿ, ಜೀವದ ಹಂಗು ತೊರೆದು ಸಮಾಜದ ಮತ್ತು ಎಲ್ಲರ ಮನಸ್ಸನ್ನು ಸ್ವಚ್ಛಗೊಳಿಸುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದಾರೆ ಎಂದರು.

ಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ ಮಾತನಾಡಿ, ಪೌರಕಾರ್ಮಿಕರು ಉತ್ತಮವಾಗಿ ಜೀವನ ಸಾಗಿಸಲು ಪಾಲಿಕೆ ವತಿಯಿಂದ ಅನೇಕ ಯೋಜನೆಗಳು, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ೧೬೮ ಕಾರ್ಮಿಕರಿಗೆ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ೨೨ ಕಾರ್ಮಿಕರಿಗೆ ಬಡ್ತಿ ಆಗಿದೆ. ೨೦೧೮ರಲ್ಲಿ ೩೮ ಕಾರ್ಮಿಕರ ನೌಕರಿ ಕಾಯಂಗೊಳಿಸಲಾಗಿದೆ. ಪಿಎಫ್, ಇಎಸ್‌ಐ, ಎಸ್‌ಬಿಐ ಪಾಲಿಸಿ, ೨೦೧೬ರಿಂದ ತಾಳಿ ಭಾಗ್ಯ ಯೋಜನೆ, ವೈದ್ಯಕೀಯ ಪರೀಕ್ಷೆ ಸೌಲಭ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರಕಾರ್ಮಿಕರ ನೌಕರಿ ಕಾಯಂ, ಏಕರೀತಿಯ ವೇತನ ಸೇರಿದಂತೆ ವಿವಿಧ ೧೧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಮಹಾಪೌರರಿಗೆ ಸಲ್ಲಿಸಿದರು. 

ಕೊರೊನಾ ವಾರಿಯರ್ಸ್ ಕುಟುಂಬದವರಿAದ ಉದ್ಘಾಟನೆ: ಕಾರ್ಯಕ್ರಮದ ಉದ್ಘಾಟನೆಯನ್ನು ಕೊರೊನಾದಿಂದ ಮರಣ ಹೊಂದಿದ ಕೊರೊನಾ ವಾರಿಯರ್ಸ್ ಕುಟುಂಬದ ಸದಸ್ಯರು ನೆರವೇರಿಸಿದ್ದು ವಿಶೇಷವಾಗಿತ್ತು. 

ಗೌರವ ಸಮರ್ಪಣೆ: ಕಾರ್ಯಕ್ರಮದಲ್ಲಿ ೨೦೨೦-೨೧ನೇ ಸಾಲಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಆರೋಗ್ಯ ನಿರೀಕ್ಷಕರು, ಲಿಪಿಕ ವೃಂದ ಸೇರಿದಂತೆ ಇತರೆ ನೌಕರರನ್ನು ಹಾಗೂ ಕೋವಿಡ್ ಎರಡನೇ ಅಲೆಯಲ್ಲಿ ಮೃತಪಟ್ಟ ಕೋವಿಡ್ ವಾರಿಯರ್‌ಗಳ ಕುಟುಂಬದ ಸದಸ್ಯರನ್ನು ಈ ವೇಳೆ ಗೌರವಿಸಲಾಯಿತು. 

ಪಾಲಿಕೆ ಉಪ ಮಹಾಪೌರ ಕೆ.ಶಂಕರ್ (ಗನ್ನಿ), ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಎಂ.ಮಾರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಪೌರಕಾರ್ಮಿಕರು, ಶಾಖಾ ಸಂಘದ ಪದಾಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಇದ್ದರು.