ಶಿವಮೊಗ್ಗ : ಶರಾವತಿ ಸಂತ್ರಸ್ತರಿಗೆ ಭೂಮಿಹಕ್ಕು ನೀಡಬೇಕೆಂದು ಹಾಗೂ ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯ್ತು. ಶಿವಮೊಗ್ಗ ಜಿಲ್ಲಾ ಶರವಾತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಶರಾವತಿ ಸಂತ್ರಸ್ತರು ಭಾಗವಹಿಸಿದ್ದರು.
ಪ್ರತಿಭಟನಾ ರ್ಯಾಲಿಯು ಆಲ್ಕೋಳ ವೃತ್ತದಿಂದ ಆರಂಭವಾಗಿ, ಅಶೋಕ ವೃತ್ತ, ಅಮೀರ್ ಅಹಮದ್ ವೃತ್ತ, ಗೋಪಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತ್ಯವಾಯಿತು. 1962 ರಿಂದ ನಮಗೆ ಭೂಮಿ ಹಕ್ಕು ಸಿಕ್ಕಿಲ್ಲ. ಸರ್ಕಾರ ಕೂಡಲೇ ನಮಗೆ ಭೂಮಿ ಹಕ್ಕು ಕೊಡಬೇಕು. ಇಲ್ಲ ಮುಳುಗಡೆಯಾಗಿರುವ ಜಾಗವನ್ನೇ ನಮಗೆ ಬಿಟ್ಟುಕೊಡಬೇಕು. ಮುಳುಗಡೆ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಮತ್ತಿತರ ಹಕ್ಕೋತ್ತಾಯಗಳನ್ನು ಇಡೇರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.