ಶ್ರೀಲಂಕಾ : ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದಿನನಿತ್ಯದ ಅಗತ್ಯವಸ್ತುಗಳ ಕೊರತೆ ಎದುರಾಗಿದ್ದು, ಜನತೆ ರೊಚ್ಚಿಗೆದ್ದಿದ್ದಾರೆ. ಪರಿಸ್ಥಿತಿ ನಿಭಾಯಿಸಲು ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಯುಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್, ಟಿಕ್ಟಾಕ್ ಸೇರಿದಂತೆ ಎರಡು ಡಜನ್ ಸಾಮಾಜಿಕ ಮಾಧ್ಯಮಗಳಿಗೆ ನಿಬಂಧ ಹೇರಲಾಗಿದೆ.
ಲಾಕ್ಡೌನ್ ಹೊಡೆತ ಹಾಗೂ ಅಸಮರ್ಪಕ ವಿದೇಶಿ ವಿನಿಮಯ ನಿರ್ವಹಣೆಯೇ ಇಂದಿನ ಲಂಕಾ ದಹನಕ್ಕೆ ಕಾರಣವಾಗಿದೆ. ಇಡೀ ದೇಶವನ್ನೇ ನಿಯಂತ್ರಣಕ್ಕೆ ಪಡೆದಿರುವ ಲಂಕಾ ಸೇನೆ, ರಸ್ತೆ ರಸ್ತೆಗೂ ಯೋಧರನ್ನು ನಿಯೋಜಿಸಿದೆ. ಬಂದೂಕಿನ ನಳಿಕೆಯಡಿ ಜನತೆ ಬದುಕುವಂತಾಗಿದೆ. ತೀವ್ರ ವಿದ್ಯುತ್ ಬಿಕ್ಕಟ್ಟು ಉಂಟಾಗಿದ್ದು, ಪ್ರತಿಭಟನೆಗಳನ್ನು ಹತ್ತಿಕ್ಕಲು ಶನಿವಾರದಿಂದ ಸೋಮವಾರದವರೆಗೆ 36 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ.