ಬೆಂಗಳೂರು : ಕೇಸರಿ ಧ್ವಜವನ್ನು ಮುಂದೊಂದು ದಿನ ಕೆಂಪುಕೋಟೆ ಮೇಲೆ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲೇ ಕಾಂಗ್ರೆಸ್ ಶಾಸಕರು ತಮ್ಮ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಮಧ್ಯಾಹ್ನದ ಭೋಜನದ ಬಳಿಕ ವಿಧಾನನಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಬಳಿಕ ಸ್ಪೀಕರ್ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸದನ ಕಲಾಪವನ್ನು ಮುಂದೂಡಿದರು. ಇತ್ತ ಸದನ ಮುಂದೂಡಿಕೆಯಾದ್ರೂ ಕೈ ಶಾಸಕರು ತಮ್ಮ ಧರಣಿ ಮುಂದುವರಿಸಿದ್ದಾರೆ.
ಧರಣಿಗೆ ಕೂತ ಕೈ ಶಾಸಕರ ಮನವೊಲಿಕೆಗೆ ಸಿಎಂ ಬೊಮ್ಮಾಯಿ ಯತ್ನಿಸಿದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಹೋರಾತ್ರಿ ಪ್ರತಿಭಟನೆ ಕೈಬಿಡಲು ನಿರಾಕರಿಸಿದರು. 69ಕೈ ಶಾಸಕರೂ ಸದನದಲ್ಲೇ ಉಳಿಯುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು. ಯಾರೆಲ್ಲಾ ಹೊರಕ್ಕೆ ಹೋಗಿದ್ದಾರೆ ಅವರೆಲ್ಲರನ್ನೂ ಸದನದ ಒಳಕ್ಕೆ ಕರೆಸುವಂತೆ ಸೂಚಿಸಿದರು.
ಕಾಂಗ್ರೆಸ್ ಶಾಸಕರು ಸದನದಲ್ಲೇ ಅಹೋರಾತ್ರಿ ಧರಣಿ ಮಾಡುತ್ತಿರುವ ಹಿನ್ನೆಲೆ ಎಲ್ಲ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಮನವಿ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ, ಅಧಿಕಾರಿಗಳಿಗೆ ಎಲ್ಲ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು. ಧರಣಿನಿರತ ಶಾಸಕರಿಗೆ ರಾತ್ರಿಗೆ ಸಸ್ಯಾಹಾರಿ ಊಟ, ಹಾಸಿಗೆ, ಟೀ-ಕಾಫಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಶಾಲಾಕ್ಷಿ ತಿಳಿಸಿದರು.